Tuesday, September 15, 2009

ಗೋವಿಂದರಾಜನಗರ ಕ್ಷೇತ್ರ ಚುನಾವಣೆ...

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೋವಿಂದರಾಜನಗರ ಕ್ಷೇತ್ರ ಬಹಳ ಪ್ರಸಿದ್ದಿಯನ್ನು ಪಡೆದಿತ್ತು... ಕಾರಣ ಅಲ್ಲಿ ಚುನಾವಣೆಯಲ್ಲಿ ನಿಂತಿದ್ದ ಅಭ್ಯರ್ಥಿಗಳು... ಜನತಾ ದಳದಿಂದ ಕಾಂಗ್ರೆಸ್ ಗೆ, ಕಾಂಗ್ರೆಸ್ ಇಂದ ಬಿ.ಜೆ.ಪಿ ಗೆ ಪಕ್ಷಾಂತರ ಮಾಡಿದ್ದರೂ ಸೋಲಿಲ್ಲದ ಸರದಾರನೆಂದೇ ಖ್ಯಾತರಾಗಿದ್ದ ಸೋಮಣ್ಣ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯ ಕೃಷ್ಣ... ಚುನಾವಣೆ ಮುಗಿದ ನಂತರ ಇದೇ ಗೋವಿಂದರಾಜನಗರ ಕ್ಷೇತ್ರದಲ್ಲಿ, ಒಂದು ಪುಟ್ಟ ಅಂಗಡಿಯ ಮುಂದೆ ಕುಳಿತು ಟೀ ಕುಡಿಯುತ್ತಿದ್ದ ನಮ್ಮ ಬೋರಣ್ಣನನ್ನು ನೋಡಿದ ಪುಟ್ಟಣ್ಣ ಕೇಳಿದ...

ಪುಟ್ಟಣ್ಣ : "ಇದೇನು ಬೋರಣ್ಣ, ಇಲ್ಲಿ ಕೂತಿದ್ದೀಯ ?... ಏನ್ ಸಮಚಾರ ?"

ಬೋರಣ್ಣ : "ಇನ್ನೇನ್ಲಾ ಇದ್ದಾತು... ಚುನಾವಣೆ ರಿಸಲ್ಟ್ ಬಂತಲ್ಲಾ.... ಸೋಮಣ್ಣ ಹೋಗ್ಬುಟ್ಟಾ "

ಪು : "ಹೂಂ ಕಣಣ್ಣಾ... ಸರ್ಕಾರಕ್ಕೆ ಭಾರೀ ಮುಖಭಂಗ ಆಯಿತು... ಸೋಮಣ್ಣ ಗೆದ್ದೇ ಗೆಲ್ತಾನೇ ಅಂತ ಅನ್ಕಂಡ್ರೆ ಇಂಗಾತಲ್ಲಾ..."

ಬೋ : "ಲೇ... ಗೆದ್ದಿರೋನು ಏನು ಸಾಮಾನ್ಯದೋನು ಅನ್ಕಂಡ್ಯಾ... ವಿಜಯನಗರದ MLA ಕೃಷ್ಣಪ್ಪನ ಮಗ ಕಣ್ಲಾ..."

ಪು : "ಹೂಂ.. ಪಾಪ....ಏನು ಗೊತ್ತಿಲ್ಲದೆ ಇರೋ ಆ ಎಳೇ ಹುಡುಗನ್ನ ಎಳ್ಕೋಂಡ್ ಬಂದು ಸೋಮಣ್ಣನ ಸೋಲಿಸಿದ್ರಲ್ಲಾ.."

ಬೋ : "ಲೇ... ಏನ್ ತಿಳ್ಕಂಡೆ ?... ಸೋಮಣ್ಣನ ಸೋಲಿಸಿದ್ದು ಆ ಎಳಿ ಹುಡುಗ ಅಲ್ಲಾ... ಆ ಮುದಿ ವಯ್ಯ "

ಪು : "ಯಾರಣ್ಣಾ ಅದು ? "

ಬೋ : "ಅದೇ... ಆ ಅಪ್ಪ ಮಗಾ..."

ಪು : "ಹಾಂ.... ಗೌಡ್ರಾ ? .... ನಿಂಗೆಂಗೆ ಗೊತ್ತು ? "

ಬೊ : "ಇಲ್ಲ್ ಹೇಳ್ತೀನಿ ಕೇಳು... ಚುನಾವಣೆ ಇದ್ದದ್ದು ಮಂಗಳವಾರ ಅಲ್ವಾ ? ... ಭಾನುವಾರ ಕ್ಯಾನ್ವಾಸ್ ಅಂದ್ರೆ ಪ್ರಚಾರಕ್ಕೆ ಕೊನೇ ದಿನ. ನಾನು ಹಿಂಗೆ ಪಕ್ಕದ ಬೀದಿಯಲ್ಲಿ ಹೋಯ್ತಾ ಇದ್ನಾ... ಅಲ್ಲ್ ನೋಡ್ತೀನಿ... ಕಾಂಗ್ರೆಸ್ ನೋರು ಹಾಗು ಜನತಾ ದಳದವರು ಸೇರ್ಕೊಂಡು ಪ್ರಚಾರ ಮಾಡ್ತಾವ್ರೆ...ಕೈಯಲ್ಲಿ ಜನತಾದಳದ ಬಾವುಟ... ಕುತ್ತಿಗೆಯಲ್ಲಿ ಕಾಂಗ್ರೆಸ್ ಬಾವುಟ... ಎಲ್ಲಾ ವಕ್ಕಲಿಗರೂ ಕೃಷ್ಣಪ್ಪನ್ ಮಗಂಗೆ ಓಟ್ ಹಾಕಾವ್ರೆ..."

ಪು : "ಹೌದಾ.... ಹಂಗಾದ್ರೆ, ಜಾತಿ ಇಲ್ಲಿ ಕೆಲಸ ಮಾಡೈತೆ ? "

ಬೋ : "ಹೂಂ ಮತ್ತೇ... ನಾನು ಹಿಂಗೆ ನಿಂತ್ತಿದ್ದನಾ... ಒಬ್ಬ ಮೇಷ್ಟರು ಬಂದು, "ಬೋರಣ್ಣ... ಕರ್ನಾಟಕದಾಗೆ ಲಿಂಗಾಯಿತರ ಪವರ್ ಜಾಸ್ತಿ ಆಗೈತೆ. ನೀನು ವಕ್ಕಲಿಗ. ವಕ್ಕಲಿಗರು ವಕ್ಕಲಿಗರಿಗೇ ಓಟ್ ಹಾಕಬೇಕು.. ಆಗ್ಲೇ ವಕ್ಕಲಿಗರ ಪವರ್ ಜಾಸ್ತಿಯಾಗೋದು" ಅಂದರು ಕಣ್ಲಾ. ಮೇಷ್ಟರಾಗಿ ಈ ವಯ್ಯ ಇಂಥಾ ಮಾತಾಡ್ತಾನಲ್ಲಾ ಅಂತ ಅನ್ಕ್ಂಡೆ ನಾನು.."

ಪು : "ಹಾಂ... ಮೇಷ್ಟರಾಗಿ ಇಂಥಾ ಕೆಲಸ ಮಾಡ್ತಾರಾ ? "

ಬೋ : " ಮತ್ತೇ... ಗೆದ್ದಿರೋನು ಏನು ಸಾಮಾನ್ಯದೋನಾ.. ಹತ್ತಿರ ಹತ್ತಿರ 750 ಕೋಟಿ ರುಪಾಯಿ ಕುಳ "

ಪು : " ಹಾಂ... " (ಪುಟ್ಟಣ್ಣ ಬಾಯಿ ಬಿಟ್ಕೊಂಡು ಹಾಗೆ ನಿಂತುಕೊಂಡ)

ಬೋ : "ಆ ಹುಡುಗಂಗೆ, ಆಗ್ಲೇ ಹೆಣ್ಣು ಸಿದ್ದ ಆಗವಳಂತೆ. ಅದೇ ನಮ್ಮ ಡಿ.ಕೆ. ಶಿವಕುಮಾರ್ ಮಗಳಂತೆ "

ಪು : "ಹಾಂ... ಹೌದಾ ? "

ಬೋ : "ನಂಗೂ ಸರಿಯಾಗಿ ಗೊತ್ತಿಲ್ಲ... ಯಾರೋ ಇಂಗೆ ಮಾತಾಡ್ತಾ ಇದ್ರು... ಆದ್ರು ಸೋಮಣ್ಣನ ಟೈಮ್ ಸರಿ ಇಲ್ಲ ಕಣ್ಲಾ.. "

ಪು : "ಯಾಕ್ ಬೋರಣ್ಣ ?"

ಬೋ : "ಅವರು ಮುಜರಾಯಿ ಇಲಾಖೆಗೆ ಮಿನಿಸ್ಟರ್ ಆಗಿದ್ದ.. ಮುಜರಾಯಿ ಇಲಾಖೆಗೆ ಮಿನಿಸ್ಟರ್ ಆದವರು ಗೆಲ್ಲಕಿಲ್ವ್ಂತೆ.."

ಪು : "ಹೌದಾ... ಇರಬಹುದು. ಅದೇ ಯಾವುದೇ C M ಚಾಮರಾಜನಗರಕ್ಕೆ ಹೋದರೆ, C M ಪಟ್ಟ ಕಳೆದುಕೊಳ್ಳುತ್ತಾರಂತಲ್ಲಾ.... ಹಾಗೆ ಅಲ್ವಾ..."

ಬೋ : "ಹೂಂ....ಆದ್ರೇ ಪುಟ್ಟಣ್ಣ, ನಮ್ಮ್ ಹಳೇ C M, ಕುಮಾರಸ್ವಾಮಿ ಹೋಗಿದ್ರು ಅಲ್ವಾ.."

ಪು : "ಅದಕ್ಕೆ ಅಲ್ವಾ... ಅವರು C M ಪಟ್ಟ ಕಳ್ಳ್ ಕೊಂಡ್ರು...."

ಬೋ : "ಪುಟ್ಟಣ್ಣ, ನೀನು ಶ್ಯಾನೆ ಬುದ್ಧಿವಂತ... ಏನೇನೊ ತಿಳ್ಕ್ಂಡಿದ್ದೀಯ.."

ಪು : "ಏನೋ ಗೊತ್ತಿಲ್ಲಾ ಬೋರಣ್ಣ...ಎಲ್ಲಾ ನಿಮ್ಮಂತವರ ಸಹವಾಸ.. "

ಬೋ : " ಸರಿ ಪುಟ್ಟಣ್ಣ.. ಹೊತ್ತಾಯ್ತು ನಾನು ಹೊರಡ್ತೀನಿ..."

ಪು : "ಸರಿ ಬೋರಣ್ಣ, ನಾನು ಹೊರಡ್ತೀನಿ...ಆಮೇಲೆ ಸಿಗೋಣ... "